ಭಟ್ಕಳ, ನವೆಂಬರ್ ೧೬: ಈ ದೇಶದಲ್ಲಿ ಕ್ರಿಶ್ಚಿಯನ್ನರು, ಮುಸ್ಲೀಮರು ದೇಶದ ಹೊರಗಿನವರು ಎಂಬ ಭಾವನೆ ಕೆಲವರಲ್ಲಿ ಇದೆ. ಅವೆಲ್ಲ ಮನಸ್ಸಿನಿಂದ ಉಚ್ಛಾಟಣೆಗೊಂಡು ಏಕೀಭಾವ ರೂಪುಗೊಳ್ಳಬೇಕಾದ ಅಗತ್ಯವಿದೆ ಎಂದು ಹಿರಿಯ ಕವಿ ಬಿ.ಎ.ಸನದಿ ನುಡಿದಿದ್ದಾರೆ.
ಅವರು ಡಾ. ಜಮರುಲ್ಲಾ ಷರೀಫರ ‘ಕಾಡಲ್ಲಿ-ನಾಡಲ್ಲಿ-ನನ್ನ ಹಾಡಲ್ಲಿ’ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲೀಮರ ಪಾತ್ರವನ್ನು ವಿವರಿಸಿದ ಅವರು, ಕವಿ ಇಕ್ಬಾಲ್ ಎಲ್ಲರ ಕವಿಯಾಗಿದ್ದರು. ಈ ದೇಶ ನಮ್ಮದು ಎಂಬ ಭಾವನೆಯು ಅವರಲ್ಲಿ ಜಾಗೃತವಾಗಿತ್ತು ಎಂದರು. ಕಾವ್ಯಗಳು ಇನ್ನೊಬ್ಬರ ಮನಸ್ಸನ್ನು ತಟ್ಟಬೇಕು ಎಂದ ಅವರು ಮನುಷ್ಯ ಸಂವೇದನೆಗಳು ವಿಭಿನ್ನ ರೂಪ ತಳೆದು ಸಂಕುಚಿತ ಬೇಲಿಯೊಳಗೆ ಬಂಧಿಯಾಗುವುದಕ್ಕೆ ವಿಷಾದವ್ಯಕ್ತಪಡಿಸಿದರು.